14 ವರ್ಷಗಳ ಹಿಂದೆ ಜಾರ್ಖಂಡ್ ನ ರಾಂಚಿಯಲ್ಲಿ ನಡೆದ ದರೋಡೆ ಹಾಗೂ ರಾಬರಿ ಪ್ರಕರಣಗಳಲ್ಲಿ ಭಾಗಿಯಾದ ವಂಚಕರನ್ನು ಕರ್ನಾಟಕದ ಸಿನಿಮಾ ನಿರ್ದೇಶಕನೊಬ್ಬ ಅಲ್ಲಿನ ಎಎಸ್ ಪಿ ಜೊತೆಗೂಡಿ ತಮ್ಮ ಖೆಡ್ಡಾಗೆ ಬೀಳಿಸಿಕೊಂಡ ರೋಚಕ ಕಥೆಯೇ ರಾಂಚಿ. ದಕ್ಷಿಣ ಭಾರತದ ನಿರ್ದೇಶಕರಗಳಿಗೆ ನೂರಾರು ಕೋಟಿಯ ರೈಲ್ವೆ ಡಾಕ್ಯುಮೆಂಟರಿ ಪ್ರಾಜೆಕ್ಟನ್ನು ಕೊಡಿಸುತ್ತೇವೆ ಎಂದು ಆಸೆ ಹುಟ್ಟಿಸಿ ಆ ನಿರ್ದೇಶಕರುಗಳನ್ನು ರಾಂಚಿ ನಗರಕ್ಕೆ ಕರೆಸಿಕೊಳ್ಳುತ್ತಿದ್ದ ಡಕಾಯಿತರ ಗುಂಪೊಂದು ನಂತರ ಆ ನಿರ್ದೇಶಕರಿಂದ ಲಕ್ಷಾಂತರ ರೂ.ಗಳನ್ನು ವಸೂಲಿ ಮಾಡುತ್ತಿದ್ದರು. ಈ ಪ್ರಕರಣವನ್ನು ಪತ್ತೆಹಚ್ಚುವುದಕ್ಕೆ ಅಲ್ಲಿನ ಪೊಲೀಸರಿಗೂ ಕಷ್ಟಕರವಾಗಿತ್ತು. ಅಂಥಾ ವಂಚಕರ ತಂಡವನ್ನು ಪತ್ತೆಹಚ್ಚಲು ಆ ನಿರ್ದೇಶಕ ಹೇಗೆ ಪ್ಲಾನ್ ಮಾಡಿದ ಎಂಬ ಕಥೆಯನ್ನು ನಿರ್ದೇಶಕ ಶಶಿಕಾಂತ್
ಗಟ್ಟಿಯವರು ರೋಚಕವಾಗಿ ತೆರೆದಿಟ್ಟಿದ್ದಾರೆ. ಈ ಪ್ರಕರಣದಲ್ಲಿ ಪೋಲೀಸರೂ ಸಾಹಸ ಮೆರೆದಿದ್ದಾರೆ.
ಆ ನಿರ್ದೇಶಕ ಮಾಡಿಕೊಂಡ ಸ್ಕ್ರಿಪ್ಟ್ ನಂತೆಯೇ ಘಟನೆಗಳು ನಡೆಯುತ್ತಾ ಹೋಗುತ್ತವೆ. ಚಿತ್ರಕಥೆಯಲ್ಲಿರುವಂತೆ ಡಕಾಯಿತರನ್ನು ಪೊಲೀಸರ ಸಹಾಯದಿಂದ ಆತ ಯಾವರೀತಿ ಬಲೆಗೆ ಬೀಳಿಸುತ್ತಾನೆ ಎಂಬುದನ್ನು ರಾಂಚಿ ಚಿತ್ರದಲ್ಲಿ ನೋಡಬಹುದು. ನಿರ್ದೇಶಕ ಶಶಿಕಾಂತ್ ಗಟ್ಟಿ ಅವರು ತಮ್ಮ ಜೀವನದಲ್ಲಿ ನಡೆದ, ಸ್ವತ: ತಾವೇ ಅನುಭವಿಸಿದ ಸಂದರ್ಭಗಳನ್ನು ರಾಂಚಿ ಸಿನಿಮಾದ ಮೂಲಕ ರೋಚಕವಾಗಿ ಕನ್ನಡ ಪ್ರೇಕ್ಷಕರ ಮುಂದೆ ಯಥಾವತ್ತಾಗಿ ತೆರೆದಿಟ್ಟಿದ್ದಾರೆ. ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ಈ ಚಿತ್ರ ಆರಂಭದಿಂದ ಅಂತ್ಯದವರೆಗೂ ಕುತೂಹಲಕರ ರಿರುವುಗಳ ಮೂಲಕ ಪ್ರೇಕ್ಷರಲ್ಲಿ ಕ್ಯೂರಿಯಾಸಿಟಿ ಬಿಲ್ಡ್ ಮಾಡುತ್ತಲೇ ಹೋಗುತ್ತದೆ. ನಿರ್ದೇಶಕ ಶಶಿಕಾಂತ್ ಗಟ್ಟಿ ಅವರ ಪಾತ್ರವನ್ನಿಲ್ಲಿ ಪ್ರಭು ಮುಂಡ್ಕೂರ್ ನಿರ್ವಹಿಸಿದ್ದಾರೆ. ಆ ನಿರ್ದೇಶಕನ ಆಂತರಿಕ ಸಂಘರ್ಷಗಳು, ನೈತಿಕ ಸಂದಿಗ್ಧತೆಗಳು ಮತ್ತು ಡಕಾಯಿತರ ಗ್ಯಾಂಗ್ನ್ನು ಉರುಳಿಸಲು ಆತ ತೆಗೆದುಕೊಂಡ ಧೈರ್ಯವನ್ನು ಮೆಚ್ಚಲೇಬೇಕಿದೆ. ಚಿತ್ರದ ಬಹುತೇಕ ದೃಶ್ಯಗಳು ಕುತೂಹಲಕರವಾಗಿ ಮೂಡಿಬಂದಿದ್ದು, ಪ್ರೇಕ್ಷಕರನ್ನು ಸೀಟಿನ ತುತ್ತತುದಿಯಲ್ಲಿ ಕೂರಿಸುವಂಥ ನಿರೂಪಣೆ ಚಿತ್ರದ ಹೈಲೈಟ್. ರಾಂಚಿ ಕೇವಲ ಕ್ರೈಮ್, ಥ್ರಿಲ್ಲರ್ ಚಿತ್ರವಲ್ಲ; ಸಿನಿಮಾ ನಿರ್ದೇಶಕನಾಗಿ ಪ್ರಭು ಮುಂಡ್ಕೂರ್ ಉತ್ತಮ .ಅಭಿನಯ ನೀಡಿದ್ದಾರೆ, ನಾಯಕಿಯಾಗಿ ದಿವ್ಯಾ ಉರುಡುಗ ತಮಗೆಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಉಳಿದಂತೆ ಸಿನಿಮಾದಲ್ಲಿ ಬರುವ ಬಹುತೇಕ ಕಲಾವಿದರು ತಂತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ತಾಂತ್ರಿಕವಾಗಿಯೂ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಮೈನವಿರೇಳಿಸುವ ಆಕ್ಷನ್, ಕಥೆಗೆ ತಕ್ಕಂತೆ ನಿರೂಪಣೆ, ಮಣಿಕಾಂತ ಕದ್ರಿ ಅವರ ಸಂಗೀತ, ಸಂದೀಪ್ ಚೌಟ ಹಾಗೂ ಅಲ್ವಿನ್ ಫರ್ನಾಂಡಿಸ್ ಅವರ ಹಿನ್ನೆಲೆ ಸಂಗೀತ. ಜೊತೆಗೆ ಅಚ್ಚುಕಟ್ಟಾದ ಛಾಯಾಗ್ರಹಣ, ಸಂದರ್ಭಕ್ಕೆ ತಕ್ಕಂತೆ ಸಂಭಾಷಣೆಗಳನ್ನು ಹೆಣೆದಿರುವುದು ಈ ಚಿತ್ರದ ಹೈಲೈಟ್. ಇನ್ನು ಚಿತ್ರದಲ್ಲಿ ನಟಿಸಿದ ಕಲಾವಿದರೆಲ್ಲರ ಸಹಜವಾದ ಅಭಿನಯವೂ ಸಹ ರಾಂಚಿ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ. ಮಾಮೂಲಿ ಕಮರ್ಷಿಯಲ್ ಸಿನಿಮಾಗಳಿಗಿಂತ ಕೊಂಚ ವಿಭಿನ್ನವಾಗಿ ಮತ್ತು ಹೊಸದು ಎನ್ನಬಹುದಾದ ಜಾನರ್ ನಲ್ಲಿ ಮೂಡಿಬಂದಿರುವ `ರಾಂಚಿ` ಚಿತ್ರವು ಕ್ಲಾಸ್ ಮತ್ತು ಮಾಸ್ ಆಡಿಯನ್ಸ್ ಎರಡೂ ವರ್ಗದ ಪ್ರೇಕ್ಷಕರನ್ನು ಹಿಡಿದು ಕೂರಿಸುವ ತಾಕತ್ತು ಹೊಂದಿದೆ. ನೈಜ ಕಥೆಗಳನ್ನು ಇಷ್ಟಪಡುವವರು, ಆಕ್ಷನ್ ಗಳನ್ನು ಲೈಕ್ ಮಾಡುವವರು, ಪ್ರಮುಖವಾಗಿ ಹೊಸದಾಗಿ ಚಿತ್ರರಂಗಕ್ಕೆ ಬರುವ ನಿರ್ದೇಶಕರುಗಳು ಅವಶ್ಯವಾಗಿ ಈ ಚಿತ್ರವನ್ನು ನೋಡಬೇಕಿದೆ.
ಜಗತ್ತಿನಲ್ಲಿ ಯಾವ್ಯಾವ ರೀತಿಯಲ್ಲಿ ಮೋಸ, ವಂಚನೆಗಳು ನಡೆಯುತ್ತೆ, ಆಸೆಯಿಂದ ಚಿತ್ರರಂಗಕ್ಕೆ ಬರಬೇಕೆನ್ನುವ ಅಮಾಯಕ ನಿರ್ದೇಶಕರನ್ನು ವಂಚಕರು ಯಾವ ಯಾವ ರೀತಿಯಲ್ಲಿ ಯಾಮಾರಿಸುತ್ತಾರೆ ಎಂಬುದನ್ನು ಈ ಚಿತ್ರವನ್ನು ನೋಡಬಹುದು.